ಶ್ರೀನಿವಾಸಪುರದ ಪುಟ್ಟ ಹಳ್ಳಿಯಿಂದ ಸಂಸತ್ತಿನ ಉನ್ನತ ಹುದ್ದೆಯವರೆಗೆ; ದೇವೇಗೌಡರ ಬೆಂಬಲ, ಹನುಮಂತಪ್ಪನವರ ಮಾರ್ಗದರ್ಶನ ಸ್ಮರಿಸಿದ ಸೋಮಶೇಖರ್
ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ನೀಲಟೂರು ಎಂಬ ಪುಟ್ಟ ಗ್ರಾಮದ ಪ್ರತಿಭೆಯೊಂದು ಇಂದು ದೇಶದ ಅತ್ಯುನ್ನತ ಸದನವಾದ ರಾಜ್ಯಸಭೆಯ ಸಚಿವಾಲಯದಲ್ಲಿ ಇತಿಹಾಸ ಬರೆದಿದೆ. ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಸಭಾ ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೂಲಕ ಕೆ.ಎಸ್. ಸೋಮಶೇಖರ್ ಅವರು ಇಡೀ ರಾಜ್ಯವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ.
ತಮ್ಮ ಈ ಉನ್ನತ ಏಳಿಗೆಯ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಬೆಂಬಲ ಹಾಗೂ ಹಿರಿಯ ರಾಜಕಾರಣಿ ಹೆಚ್. ಹನುಮಂತಪ್ಪನವರ ಮಾರ್ಗದರ್ಶನ ಅಪಾರವಾಗಿದೆ ಎಂದು ಸೋಮಶೇಖರ್ ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿ, ರೈತರ ಸಂಕಷ್ಟಗಳ ಕುರಿತು ಪಿಎಚ್ಡಿ ಸಂಶೋಧನೆ ನಡೆಸಿರುವ ಇವರು, ಇಂದು ದೆಹಲಿಯ ಅಧಿಕಾರ ಕೇಂದ್ರದಲ್ಲಿ ಮಹತ್ವದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹಿಂದಿ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದರೂ, ಕನ್ನಡದ ಮೇಲಿನ ಅತೀವ ಅಭಿಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ.
ದೂರದ ದೆಹಲಿಯಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದರೂ, ನಿವೃತ್ತಿಯ ನಂತರ ತಮ್ಮ ಹುಟ್ಟೂರಿಗೆ ಮರಳಿ ತಂದೆಯಂತೆಯೇ ಶಿಕ್ಷಣ ಮತ್ತು ಕೃಷಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಹಂಬಲವನ್ನು ಅವರು ಹೊಂದಿದ್ದಾರೆ. ಕೋಲಾರದ ಮಣ್ಣಿನ ಮಗನ ಈ ಐತಿಹಾಸಿಕ ಸಾಧನೆಗೆ ಜಿಲ್ಲೆಯಾದ್ಯಂತ ಈಗ ಶ್ಲಾಘನೆ ವ್ಯಕ್ತವಾಗುತ್ತಿದೆ.









Comments
Leave a Comment