KEA ಸೂಚನೆಗೂ ಕ್ಯಾರೆ ಎನ್ನದ ಸಿಬ್ಬಂದಿ: ಕೃಪಾನಿಧಿ ಕಾಲೇಜಿನ ಮೂವರು ಅಮಾನತು – ಇದು ಉದ್ದೇಶಪೂರ್ವಕ ಕೃತ್ಯವೇ?
ಬೆಂಗಳೂರು: ಶೈಕ್ಷಣಿಕ ಪರೀಕ್ಷೆಗಳ ಹೆಸರಿನಲ್ಲಿ ಹಿಂದೂ ಧಾರ್ಮಿಕ ನಂಬಿಕೆಗಳನ್ನು ತುಳಿಯುವ ವ್ಯವಸ್ಥಿತ ಸಂಚು ಮತ್ತೆ ಮುನ್ನೆಲೆಗೆ ಬಂದಿದೆ. ನಗರದ ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ‘ಜನಿವಾರ’ ತೆಗೆಸಿದ ಅಮಾನವೀಯ ಮತ್ತು ಆಕ್ರೋಶದಾಯಕ ಘಟನೆ ನಡೆದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಸ್ಪಷ್ಟ ಮಾರ್ಗಸೂಚಿಗಳಿದ್ದರೂ, ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಕಾಲೇಜಿನ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಸಂಪ್ರದಾಯದ ಮೇಲೆ ಸವಾರಿ:
ಏಪ್ರಿಲ್ 23ರಂದು ನಡೆದ ಭೌತಶಾಸ್ತ್ರ ಪರೀಕ್ಷೆಯ ವೇಳೆ, ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ತಡೆದ ಸಿಬ್ಬಂದಿ, ಜನಿವಾರ ತೆಗೆದರೆ ಮಾತ್ರ ಒಳಗೆ ಬಿಡುವುದಾಗಿ ಪಟ್ಟು ಹಿಡಿದಿದ್ದಾರೆ. ಧಾರ್ಮಿಕ ವಿಧಿವಿಧಾನಗಳಂತೆ ಧರಿಸುವ ಪವಿತ್ರ ಜನಿವಾರವನ್ನು ಬಲವಂತವಾಗಿ ತೆಗೆಸಿದ ಸಿಬ್ಬಂದಿಯ ನಡೆಯ ವಿರುದ್ಧ ಪೋಷಕರು ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಯಾರೀ ಕಿರಾತಕ ಸಿಬ್ಬಂದಿ?
ಘಟನೆಗೆ ಸಂಬಂಧಿಸಿದಂತೆ ಕಾಲೇಜಿನ ಸಿಬ್ಬಂದಿಗಳಾದ ಸುಧಾಕರ್, ಗಿರಿಜಮ್ಮ ಮತ್ತು ಆರ್. ಸರಿತಾ ಎಂಬುವವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ವಸ್ತ್ರಸಂಹಿತೆಯ ಹೆಸರಿನಲ್ಲಿ ಧಾರ್ಮಿಕ ಚಿಹ್ನೆಗಳಿಗೆ ಕೈಹಾಕಬಾರದೆಂಬ ಕಟ್ಟುನಿಟ್ಟಿನ ಸೂಚನೆ ಇದ್ದರೂ, ಇವರು ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಿದ್ದಾರೆ ಎಂಬ ಅನುಮಾನ ದಟ್ಟವಾಗಿದೆ.
ಉದ್ದೇಶಪೂರ್ವಕ ಕೃತ್ಯ ಎಂದ KEA:
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ (DC) ಪತ್ರ ಬರೆದಿದೆ. "ಕಳೆದ ವರ್ಷದ ಕಹಿ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಜನಿವಾರ, ಲಿಂಗದಂತಹ ಧಾರ್ಮಿಕ ದಿರಿಸುಗಳನ್ನು ತೆಗೆಸಬಾರದೆಂದು ತರಬೇತಿ ವೇಳೆ ಸ್ಪಷ್ಟವಾಗಿ ಹೇಳಲಾಗಿತ್ತು. ಆದರೂ ಹೀಗಾಗಿರುವುದು ಮೇಲ್ನೋಟಕ್ಕೆ ಉದ್ದೇಶಪೂರ್ವಕ ಪಿತೂರಿಯಂತೆ ಕಾಣುತ್ತಿದೆ," ಎಂದು KEA ಆತಂಕ ವ್ಯಕ್ತಪಡಿಸಿದೆ.
"ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಚಾಳಿ" - ಆರ್. ಅಶೋಕ್ ಕಿಡಿ
ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಈ ಬಗ್ಗೆ ಎಕ್ಸ್ (ಟ್ವಿಟರ್) ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಕಾಂಗ್ರೆಸ್ ಸರ್ಕಾರವು ಮಾಂಗಲ್ಯ ಮತ್ತು ಜನಿವಾರ ತೆಗೆಸುವ ಮೂಲಕ ಹಿಂದೂ ಧರ್ಮದ ನಂಬಿಕೆಗಳನ್ನು ನಿರಂತರವಾಗಿ ಅಪಮಾನಿಸುತ್ತಿದೆ. ಕೆಪಿಎಸ್ಸಿ ಪರೀಕ್ಷೆಯಲ್ಲಿ ಮಾಂಗಲ್ಯ ತೆಗೆಸಿದ್ದ ಸರ್ಕಾರ, ಈಗ ಸಿಇಟಿ ಕೇಂದ್ರದಲ್ಲಿ ಜನಿವಾರಕ್ಕೆ ಕೈಹಾಕಿದೆ. ಇದು ಅಪ್ಪಟ ಹಿಂದೂ ವಿರೋಧಿ ಕೃತ್ಯ," ಎಂದು ಆಕ್ರೋಶ ಹೊರಹಾಕಿದ್ದಾರೆ.
ತನಿಖೆಗೆ ಆಗ್ರಹ:
ಕೇವಲ ಅಮಾನತು ಶಿಕ್ಷೆಯಲ್ಲ, ಈ ಘಟನೆಯ ಹಿಂದೆ ಯಾವುದಾದರೂ ವ್ಯವಸ್ಥಿತ ಸಂಚಿದೆಯೇ ಎಂಬ ಬಗ್ಗೆ ಹಿರಿಯ ಅಧಿಕಾರಿಗಳಿಂದ ಸಮಗ್ರ ತನಿಖೆಯಾಗಬೇಕು ಮತ್ತು ದೋಷಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಪರೀಕ್ಷೆಯ ಒತ್ತಡದಲ್ಲಿದ್ದ ವಿದ್ಯಾರ್ಥಿಗಳಿಗೆ ಈ ಘಟನೆ ಮಾನಸಿಕ ಹಿಂಸೆಯನ್ನೂ ನೀಡಿದ್ದು, ಶಿಕ್ಷಣ ಇಲಾಖೆಯ ನಡೆ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.






Comments
Leave a Comment