ಕೈಕೋಳ ಹಾಕಿ ಕಾಮಧೇನು ಬೆಂಕಿ ಹಚ್ಚಿದ ಪ್ರೇಯಸಿ; ಹಳೆಯ ಪ್ರಿಯತಮೆಯ ಫೋಟೋ ನೋಡಿ ಅತ್ತಿದ್ದ ಕಿರಾತಕಿ ಈಗ ಪೊಲೀಸರ ಅತಿಥಿ!
ಬೆಂಗಳೂರು: ಪ್ರೀತಿ ಎಂದರೆ ತ್ಯಾಗ ಎನ್ನುವ ಕಾಲ ಹೋಯಿತು, ಈಗಿನ ಪ್ರೀತಿ ದ್ವೇಷದ ಜ್ವಾಲೆಯಾಗಿ ಮಾರ್ಪಡುತ್ತಿದೆ ಎಂಬುದಕ್ಕೆ ರಾಜಧಾನಿಯ ಬ್ಯಾಡರಹಳ್ಳಿಯಲ್ಲಿ ನಡೆದ ಕಿರಣ್ ಕೊಲೆ ಪ್ರಕರಣವೇ ಸಾಕ್ಷಿ. ತನ್ನನ್ನು ನಂಬಿಸಿ ಕೈಕೊಟ್ಟ ಪ್ರಿಯಕರನನ್ನು ಕೇವಲ ಕೊಲ್ಲುವುದು ಮಾತ್ರವಲ್ಲ, ಆತ ಬೆಂಕಿಯಲ್ಲಿ ಬೆಂದು ಹೋಗುವುದನ್ನು ಕಣ್ಣಾರೆ ಕಂಡು ನಂತರ ತಾನೂ ಸಾಯಬೇಕೆಂದು ಈ 'ಸೇಡಿನ ಹಕ್ಕಿ' ಮಾಸ್ಟರ್ ಪ್ಲಾನ್ ರೂಪಿಸಿದ್ದಳು!
ಸಾವಿನ ರೂಮಿನಲ್ಲಿ ಸಿದ್ಧವಾಗಿತ್ತು 'ಡೆತ್ ಕಿಟ್'!
ಪೊಲೀಸ್ ತನಿಖೆಯಲ್ಲಿ ಬಯಲಾಗಿರುವ ವಿಚಾರಗಳು ಸಿನಿಮಾ ಕಥೆಯನ್ನೂ ಮೀರಿಸುವಂತಿವೆ. ಪ್ರಿಯಕರ ಕಿರಣ್ನನ್ನು ಸುಟ್ಟು ಹಾಕಿದ ಮೇಲೆ ತಾನೂ ಬದುಕಬಾರದೆಂದು ಆರೋಪಿ ಪ್ರೇಮಾ ನಿರ್ಧರಿಸಿದ್ದಳು. ಒಂದು ವೇಳೆ ಬೆಂಕಿಯಿಂದ ತಾನು ಪಾರಾದರೆ, ಪ್ರಾಣ ಬಿಡಲೆಂದೇ ರೂಮಿನಲ್ಲಿ ವಿಷದ ಬಾಟಲಿ ಹಾಗೂ ಮಾತ್ರೆಗಳನ್ನು ಸಿದ್ಧವಾಗಿಟ್ಟುಕೊಂಡಿದ್ದಳು. ಆದರೆ, ಬೆಂಕಿಯ ಜ್ವಾಲೆ ಕಿರಣ್ನನ್ನು ಆಪೋಶನ ತೆಗೆದುಕೊಳ್ಳುವಾಗ ಆತನ ಕಿರುಚಾಟ ಮತ್ತು ಬೆಂಕಿಯ ತೀವ್ರತೆಗೆ ಬೆದರಿದ ಪ್ರೇಮಾ, ಸಾಯುವ ನಿರ್ಧಾರ ಕೈಬಿಟ್ಟು ಪ್ರಾಣ ಉಳಿಸಿಕೊಳ್ಳಲು ಹೊರಕ್ಕೆ ಓಡಿ ಬಂದಿದ್ದಾಳೆ.
ಆನ್ಲೈನ್ನಲ್ಲಿ ಬುಕ್ ಆಗಿತ್ತು 'ಕೈಕೋಳ' (Handcuff)!
ಈ ಕೊಲೆ ಆಕಸ್ಮಿಕವಾಗಿ ನಡೆದಿದ್ದಲ್ಲ, ಬದಲಿಗೆ ಇದು ಪಕ್ಕಾ ಪ್ಲಾನ್ಡ್ ಮರ್ಡರ್. ಕಿರಣ್ನನ್ನು ಸಾಯಿಸಲು ಈಕೆ ಎರಡು ದಿನ ಮೊದಲೇ ಸಿದ್ಧತೆ ನಡೆಸಿದ್ದಳು. ಆನ್ಲೈನ್ನಲ್ಲಿ ಹ್ಯಾಂಡ್ಕಪ್ ಮತ್ತು ಬೆಲ್ಟ್ ಆರ್ಡರ್ ಮಾಡಿ ತರಿಸಿಕೊಂಡಿದ್ದ ಈಕೆ, ಕಿರಣ್ನನ್ನು ಮದುವೆಯ ಆಸೆ ತೋರಿಸಿ ಮನೆಗೆ ಕರೆಸಿಕೊಂಡಿದ್ದಳು. ನಗುನಗುತ್ತಲೇ ಆತನ ಕೈಕಾಲು ಕಟ್ಟಿ ಹಾಕಿದವಳು ಕ್ಷಣಾರ್ಧದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ 'ಸೇಡಿನ ಅಟ್ಟಹಾಸ' ಮೆರೆದಿದ್ದಾಳೆ.
ಕಿಚ್ಚು ಹಚ್ಚಿದ್ದು 'ಎಕ್ಸ್ ಗರ್ಲ್ಫ್ರೆಂಡ್' ಫೋಟೋ!
ನಾಲ್ಕು ವರ್ಷಗಳ ಪರಿಚಯ, ಎರಡು ವರ್ಷಗಳ ಗಾಢ ಪ್ರೀತಿ ಹಳಸಲು ಕಾರಣವಾಗಿದ್ದು ಕಿರಣ್ನ ಹಳೆ ಪ್ರೇಮಿಯ ಎಂಟ್ರಿ. ಕಿರಣ್ ತನ್ನ ಹಳೆಯ ಪ್ರಿಯತಮೆಯ ಹುಟ್ಟುಹಬ್ಬ ಆಚರಿಸಿ, ಆಕೆಯ ಜೊತೆ ಫೋಟೋ ತೆಗೆಸಿಕೊಂಡಿದ್ದನ್ನು ಕಂಡು ಪ್ರೇಮಾ ಕೆರಳಿ ಕೆಂಡವಾಗಿದ್ದಳು. ತನ್ನ ಫೋನ್ ನಂಬರ್ ಬ್ಲಾಕ್ ಮಾಡಿ, ಹಳೆ ಪ್ರೇಮಿಯ ಹಿಂದೆ ಬಿದ್ದ ಕಿರಣ್ಗೆ 'ಮರಣ ದಂಡನೆ' ನೀಡಲೇಬೇಕೆಂದು ಈಕೆ ಸಂಚು ರೂಪಿಸಿದ್ದಳು.
ಪೊಲೀಸರ ಬಲೆಯಲ್ಲಿ ಕಿರಾತಕಿ
ಆರಂಭದಲ್ಲಿ ಇದು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಆದರೆ ಬ್ಯಾಡರಹಳ್ಳಿ ಪೊಲೀಸರ ಹದ್ದಿನ ಕಣ್ಣಿನ ತನಿಖೆಯಲ್ಲಿ ಅಸಲಿ ಸತ್ಯ ಹೊರಬಿದ್ದಿದೆ. ಪ್ರೀತಿ ದ್ವೇಷವಾಗಿ ಬದಲಾದಾಗ ಎಂತಹ ಭೀಕರ ಅಂತ್ಯವಾಗುತ್ತದೆ ಎಂಬುದಕ್ಕೆ ಈ ಪ್ರಕರಣ ಕನ್ನಡಿ ಹಿಡಿದಿದೆ. ಸದ್ಯ ಪ್ರೇಮಾ ಪೊಲೀಸರ ವಶದಲ್ಲಿದ್ದು, ಈಕೆಯ ಈ ಕ್ರೂರ ಕೃತ್ಯಕ್ಕೆ ಬೇರೆ ಯಾರಾದರೂ ಸಾಥ್ ನೀಡಿದ್ದಾರೆಯೇ ಎಂಬ ಆಯಾಮದಲ್ಲಿ ತನಿಖೆ ಚುರುಕುಗೊಂಡಿದೆ.
ಮಾನವೀಯತೆ ಮೆರೆದ ನೆರೆಮನೆ ಮಹಿಳೆ!
ಕಿರಣ್ ಬೆಂಕಿಯಲ್ಲಿ ಬೇಯುತ್ತಿದ್ದಾಗ, ಅರೆಬರೆ ಬಟ್ಟೆಯಲ್ಲಿ ಗಾಬರಿಯಿಂದ ಹೊರಗೆ ಓಡಿಬಂದಿದ್ದ ಪ್ರೇಮಾಳನ್ನು ಕಂಡು ಪಕ್ಕದ ಮನೆಯ ಮಹಿಳೆ ಮರುಕಪಟ್ಟಿದ್ದರು. ಆಕೆಯೇ ಬಟ್ಟೆ ನೀಡಿ ರಕ್ಷಿಸಿದ್ದರು. ಆದರೆ ತಾನು ರಕ್ಷಿಸಿದ್ದು ಒಬ್ಬ ಕೊಲೆಗಾತಿಯನ್ನು ಎಂಬ ಸತ್ಯ ತಿಳಿದು ಈಗ ಇಡೀ ಬಡಾವಣೆಯೇ ಸ್ತಬ್ಧವಾಗಿದೆ.









Comments
Leave a Comment