ಎಲ್ಲಾ ಪರೀಕ್ಷೆ ಬರೆದರೂ 'ಆಬ್ಸೆಂಟ್' ಪಟ್ಟ ಕಟ್ಟಿದ ಕೆಎಸ್ಇಎಬಿ; ಲೀಸಾ ಖಾನಮ್ ಬಾಳಲ್ಲಿ ಮಂಡಳಿಯ ಎಡವಟ್ಟಿನಿಂದ ಕಾರ್ಮೋಡ!
ಕಾರವಾರ:
ತನ್ನ ಅಂಧತ್ವವನ್ನೇ ಮೆಟ್ಟಿ ನಿಂತು, ಕತ್ತಲ ಹಾದಿಯಲ್ಲೂ ಅಂಕಗಳ ಬೆಳಕು ಚೆಲ್ಲಿದ ಆ ವಿದ್ಯಾರ್ಥಿನಿಯ ಶ್ರಮಕ್ಕೆ ಪರೀಕ್ಷಾ ಮಂಡಳಿ ಮರಣಶಾಸನ ಬರೆದಿದೆ. ಕಣ್ಣಿಲ್ಲದಿದ್ದರೂ ಮೆದುಳಿನ ಶಕ್ತಿಯಿಂದ ಸಾಧನೆ ಮಾಡಿದ ಪ್ರತಿಭಾವಂತ ಅಂಧ ವಿದ್ಯಾರ್ಥಿನಿಯನ್ನೇ ಫೇಲ್ ಮಾಡುವ ಮೂಲಕ ಎಸ್ಎಸ್ಎಲ್ಸಿ ಪರೀಕ್ಷಾ ಪ್ರಾಧಿಕಾರ (KSEAB) ತನ್ನ ಅಮಾನವೀಯ ಮತ್ತು ಕ್ರಿಮಿನಲ್ ನಿರ್ಲಕ್ಷ್ಯವನ್ನು ಪ್ರದರ್ಶಿಸಿದೆ.
ಘಟನೆಯ ವಿವರ:
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಂದಿರಾ ನಗರದ ಯೂನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ಲೀಸಾ ಖಾನಮ್, ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿದವಳು. ಅಂಧತ್ವದ ಸವಾಲುಗಳ ನಡುವೆಯೂ ಈಕೆ ಗಳಿಸಿದ ಅಂಕಗಳು ಮಂಡಳಿಯ ಮುಖಕ್ಕೆ ಮಂಗಳಾರತಿ ಎತ್ತುವಂತಿವೆ:
- ಕನ್ನಡ: 100
- ಇಂಗ್ಲೀಷ್: 92
- ಎಕನಾಮಿಕ್ಸ್: 98
- ಪೊಲಿಟಿಕಲ್ ಸೈನ್ಸ್: 92 ಒಟ್ಟು 526 ಅಂಕಗಳನ್ನು (84.16%) ಗಳಿಸಿರುವ ಈ ಪ್ರತಿಭೆಗೆ ಈಗ ಪರೀಕ್ಷಾ ಮಂಡಳಿ 'ಫೇಲ್' ಎಂಬ ಹಣೆಪಟ್ಟಿ ಹಚ್ಚಿದೆ!
ಸೋಷಿಯಲ್ ಸೈನ್ಸ್ನಲ್ಲಿ ನಡೆದಿದ್ದೇನು?
ಲೀಸಾ ಖಾನಮ್ ಎಲ್ಲಾ ವಿಷಯಗಳ ಪರೀಕ್ಷೆಗೂ ಹಾಜರಾಗಿದ್ದಳು. ಆದರೆ, ಫಲಿತಾಂಶ ಬಂದಾಗ ಮಂಡಳಿಯು ಈಕೆಯನ್ನು ಸೋಷಿಯಲ್ ಸೈನ್ಸ್ ವಿಷಯದಲ್ಲಿ 'ಗೈರು' (Absent) ಎಂದು ನಮೂದಿಸಿದೆ. ವಿದ್ಯಾರ್ಥಿನಿಯ ಬಳಿ ಇರುವ ಪರೀಕ್ಷಾ ಪ್ರವೇಶ ಪತ್ರದಲ್ಲಿ (Hall Ticket) ಅಂದು ಪರೀಕ್ಷಾ ಮೇಲ್ವಿಚಾರಕರು ಮಾಡಿದ ಸಹಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಹಾಜರಾತಿ ಪುಸ್ತಕದಲ್ಲೂ ಸಹಿ ಇದೆ. ಹೀಗಿದ್ದರೂ, ಮಂಡಳಿಯ ಡೇಟಾ ಎಂಟ್ರಿ ಅಥವಾ ತಾಂತ್ರಿಕ ವಿಭಾಗದ ಘೋರ ತಪ್ಪಿನಿಂದಾಗಿ ಇಂದು ಒಬ್ಬ ಅಂಧ ವಿದ್ಯಾರ್ಥಿನಿ ಕಣ್ಣೀರು ಹಾಕುವಂತಾಗಿದೆ.
"ಇದು ಕೇವಲ ತಾಂತ್ರಿಕ ಎಡವಟ್ಟಲ್ಲ, ಇದೊಂದು ಶೈಕ್ಷಣಿಕ ಅಪರಾಧ. ರಾತ್ರಿ ಹಗಲು ಎನ್ನದೆ ಓದಿ ಸಾಧನೆ ಮಾಡಿದ ವಿದ್ಯಾರ್ಥಿನಿಯ ಮಾನಸಿಕ ಸ್ಥಿತಿಯ ಜೊತೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು." - ಆಕ್ರೋಶಗೊಂಡ ಪಾಲಕರು.
ಮಂಡಳಿಯ ವಿರುದ್ಧ ಜನಾಕ್ರೋಶ
ಪರೀಕ್ಷಾ ಪ್ರಾಧಿಕಾರವು ಪ್ರತಿ ವರ್ಷ ಇಂತಹ ಹತ್ತಾರು ಎಡವಟ್ಟುಗಳನ್ನು ಮಾಡುತ್ತಲೇ ಬಂದಿದೆ. ಆದರೆ, ಒಬ್ಬ ಅಂಧ ವಿದ್ಯಾರ್ಥಿನಿ ತನ್ನ ಹಕ್ಕಿನ ಅಂಕಗಳಿಗಾಗಿ ಹೋರಾಡುವಂತೆ ಮಾಡಿರುವುದು ಮಂಡಳಿಯ ದಪ್ಪ ಚರ್ಮದ ಆಡಳಿತಕ್ಕೆ ಸಾಕ್ಷಿ. ಪ್ರವೇಶ ಪತ್ರದಲ್ಲಿ ಮೇಲ್ವಿಚಾರಕರ ಸಹಿ ಇದ್ದರೂ ವಿದ್ಯಾರ್ಥಿನಿಯನ್ನು ಫೇಲ್ ಮಾಡಿದ್ದು ಸಿಸ್ಟಮ್ನ ಅತಿದೊಡ್ಡ ವೈಫಲ್ಯ.
ಒಬ್ಬ ಅಂಧ ವಿದ್ಯಾರ್ಥಿನಿ ತನ್ನ ಅಸಾಧಾರಣ ಪ್ರತಿಭೆಯಿಂದ ಇಡೀ ಜಿಲ್ಲೆಗೆ ಹೆಮ್ಮೆ ತರಬೇಕಿತ್ತು. ಆದರೆ ಮಂಡಳಿಯ ಈ 'ಕ್ರಿಮಿನಲ್ ನಿರ್ಲಕ್ಷ್ಯ' ಆಕೆಯನ್ನು ಅಪರಾಧಿಯಂತೆ ಪರೀಕ್ಷಾ ಕೇಂದ್ರಗಳಿಗೆ ಅಲೆಯುವಂತೆ ಮಾಡಿದೆ. ಈ ಕೂಡಲೇ ಎಸ್ಎಸ್ಎಲ್ಸಿ ಬೋರ್ಡ್ ತನ್ನ ತಪ್ಪನ್ನು ತಿದ್ದಿಕೊಂಡು, ಲೀಸಾ ಖಾನಮ್ಗೆ ನ್ಯಾಯ ಒದಗಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದಾರೆ.









Comments
Leave a Comment