ಮಾನವೀಯತೆ ಮರೆತ 19ರ ಯುವತಿ: ಅವಮಾನಕ್ಕೆ ಹೆದರಿ ಹಸುಗೂಸನ್ನು ಬಲಿಪಡೆದ ಕಿರಾತಕಿ 'ರೇಣುಕಾ'
ದೇವನಹಳ್ಳಿ (ಬೆಂಗಳೂರು): ಲೋಕಕ್ಕೆ ಬೆಳಕು ನೀಡಬೇಕಾದ ಜೀವವೊಂದನ್ನು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಕತ್ತಲಿಗೆ ತಳ್ಳಿದ ಅಮಾನವೀಯ ಘಟನೆಯೊಂದು ಬೆಂಗಳೂರಿನ ಐಫೋನ್ ಫ್ಯಾಕ್ಟರಿಯಲ್ಲಿ ನಡೆದಿದೆ. ಪಾಪಿ ತಾಯಿಯೊಬ್ಬಳು ತನ್ನ ಹೆತ್ತ ಕಂದಮ್ಮನ ಗಂಟಲು ಸೀಳಿ, ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಎಸೆದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ರಕ್ತದ ಮಡುವಿನಲ್ಲಿ ಹಸುಗೂಸು!
ದೇವನಹಳ್ಳಿಯ ಫಾಕ್ಸ್ಕಾನ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಎಂಬ 19 ವರ್ಷದ ಯುವತಿಯೇ ಈ ಭೀಕರ ಕೃತ್ಯವೆಸಗಿದ ಆರೋಪಿ. ಬುಧವಾರ ಕೆಲಸದ ನಡುವೆಯೇ ಶೌಚಾಲಯಕ್ಕೆ ಹೋದ ಈಕೆಗೆ ಅಲ್ಲಿಯೇ ಹೆರಿಗೆಯಾಗಿದೆ. ಆದರೆ, ತಾಯ್ತನದ ಮಮತೆ ಮೂಡಬೇಕಾದ ಜಾಗದಲ್ಲಿ ಕ್ರೌರ್ಯ ಮೈವೆತ್ತಿದೆ. ಹಸಿಬಿಸಿ ಶಿಶುವಿನ ಗಂಟಲನ್ನು ಸೀಳಿ ಅಮಾನವೀಯವಾಗಿ ಕೊಂದ ಈಕೆ, ಏನೂ ಅರಿಯದಂತೆ ಮಗುವಿನ ಮೃತದೇಹವನ್ನು ಚೀಲದಲ್ಲಿ ಹಾಕಿ ಕಸದಂತೆ ಎಸೆದಿದ್ದಾಳೆ.
ಅವಮಾನದ ಭಯವೇ ಕೊಲೆಗೆ ಪ್ರೇರಣೆಯೇ?
ಅವಿವಾಹಿತೆಯಾಗಿರುವ ತನಗೆ ಸಮಾಜದಲ್ಲಿ ಕಳಂಕ ಅಂಟಿಕೊಳ್ಳುತ್ತದೆ ಎಂಬ ಒಂದೇ ಒಂದು ಕಾರಣಕ್ಕೆ ಈಕೆ ಮೃಗವಾಗಿ ವರ್ತಿಸಿದ್ದಾಳೆ. ಕಾಮದ ಹಸಿವಿಗೆ ಸಾಕ್ಷಿಯಾಗಿದ್ದ ಮಗುವನ್ನು ಜಗತ್ತಿಗೆ ಮುಖ ತೋರಿಸಲು ಹೆದರಿ ಬಲಿಪಡೆದಿದ್ದಾಳೆ. ಶೌಚಾಲಯಕ್ಕೆ ಹೋದ ಮತ್ತೊಬ್ಬ ಸಿಬ್ಬಂದಿ ರಕ್ತದ ಮಡುವಿನಲ್ಲಿದ್ದ ಚೀಲವನ್ನು ಕಂಡು ಕಿರುಚಿಕೊಂಡಾಗ ಈ ಘೋರ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರ ಆಕ್ರೋಶ: > "ಇದು ಕೇವಲ ಕೊಲೆಯಲ್ಲ, ಮಾನವೀಯತೆಯ ಹತ್ಯೆ. ಅವಮಾನಕ್ಕೆ ಹೆದರಿ ಹಸುಗೂಸನ್ನು ಈ ಮಟ್ಟಕ್ಕೆ ಕೊಲೆ ಮಾಡುವುದು ಕ್ಷಮಿಸಲಾರದ ಅಪರಾಧ," ಎಂದು ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಆರೋಪಿ ಚಿಕಿತ್ಸೆ
ಸದ್ಯ ಅತಿಯಾದ ರಕ್ತಸ್ರಾವದಿಂದ ಬಳಲುತ್ತಿರುವ ಆರೋಪಿ ರೇಣುಕಾನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಮುಗಿಯುತ್ತಿದ್ದಂತೆ ಆಕೆಯನ್ನು ಕಂಬಿ ಎಣಿಸುವಂತೆ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನೈತಿಕತೆ ಮರೆತು, ಕಾಮದ ಅಮಲಿನಲ್ಲಿ ಹುಟ್ಟುವ ಮಕ್ಕಳನ್ನು ಹೀಗೆ ಕಸದ ಬುಟ್ಟಿಗೆ ಎಸೆಯುತ್ತಿರುವ ಘಟನೆಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.









Comments
Leave a Comment