ಗರ್ಭಿಣಿ ಪತ್ನಿ ಮನೆಗೆ ಹೋಗಿದ್ದೇ ತಡ, ಹಸೆಮಣೆ ಏರಿದ ಭೂಪ! ಒಬ್ಬಳಿಗೆ ತಾಳಿ, ಮತ್ತೊಬ್ಬಳಿಗೆ ಉಂಗುರ, ಮಗದೊಬ್ಬಳಿಗೆ ಹಾರ! ಕಾಮುಕ ಇಂಜಿನಿಯರ್ನ 'ಸರಣಿ ಕಲ್ಯಾಣ'ಕ್ಕೆ ಜಿಗಣಿ ಪೊಲೀಸರ ಬಲೆ!
ಬೆಂಗಳೂರು: ಆತ ಓದಿದ್ದು ದೊಡ್ಡ ಇಂಜಿನಿಯರಿಂಗ್, ಮಾಡುವ ಕೆಲಸ ಪ್ರತಿಷ್ಠಿತ ಕಂಪನಿಯಲ್ಲಿ. ಆದರೆ ಬುದ್ಧಿ ಮಾತ್ರ ಬೀದಿಯಲ್ಲಿ ನಿಲ್ಲುವಂತದ್ದು! ಮದುವೆಯನ್ನೇ ಒಂದು ಲಾಭದಾಯಕ 'ಬ್ಯುಸಿನೆಸ್' ಮಾಡಿಕೊಂಡ ಈ ಕಿರಾತಕ ಇಂಜಿನಿಯರ್ ರವಿ ಮಾಡಿರುವ ವಂಚನೆಗಳು ಈಗ ಜಿಗಣಿಯಲ್ಲಿ ಬಯಲಾಗಿವೆ. ಮದುವೆಯಾಗಿ ಪತ್ನಿ ಗರ್ಭಿಣಿಯಾದಾಗ ಆಕೆಯನ್ನು ಪ್ರೀತಿಸಬೇಕಿದ್ದವನು, ಮತ್ತೊಬ್ಬಳಿಗೆ ಉಂಗುರ ತೊಡಿಸಿ, ಮಗದೊಬ್ಬಳಿಗೆ ತಾಳಿ ಕಟ್ಟಿ ಈಗ ಜೈಲು ಹಾದಿ ಹಿಡಿದಿದ್ದಾನೆ.
ವಿಕೃತ ಇಂಜಿನಿಯರ್ನ ಮೊದಲ ಆಟ!
ತುಮಕೂರಿನ ಚಿಕ್ಕನಾಯಕನಹಳ್ಳಿಯ ಈ ರವಿ, 2024ರ ಜನವರಿಯಲ್ಲಿ ಸಂಪ್ರದಾಯಬದ್ಧವಾಗಿ ಮೊದಲ ಮದುವೆಯಾಗಿದ್ದ. ಸಂಸಾರ ಸುಖವಾಗಿರಬೇಕೆಂಬ ಪತ್ನಿಯ ಆಸೆಗೆ ಮೊದಲ ದಿನವೇ ಈತ ತಣ್ಣೀರು ಸುರಿದಿದ್ದ. ವರದಕ್ಷಿಣೆಗಾಗಿ ಪೀಡಿಸುವುದು ಮಾತ್ರವಲ್ಲದೆ, ಪತ್ನಿಯ ಜೊತೆ ವಿಕೃತವಾಗಿ ವರ್ತಿಸುತ್ತಾ ರಾಕ್ಷಸನಂತೆ ಕಾಡುತ್ತಿದ್ದ.
ಧರ್ಮದೇಟು ಬಿದ್ದರೂ ಕಲಿಯದ ಬುದ್ಧಿ!
ಕಥೆಯ ಟ್ವಿಸ್ಟ್ ಶುರುವಾಗಿದ್ದೇ ಇಲ್ಲಿ. ಮೊದಲ ಪತ್ನಿ ಗರ್ಭಿಣಿಯಾದಾಗ ಆಕೆಯನ್ನು ತವರಿಗೆ ಕಳಿಸಿದ ರವಿ, ತನಗೆ ಮದುವೆಯೇ ಆಗಿಲ್ಲ ಎಂದು ಪೋಸು ಕೊಟ್ಟು ಅಕ್ಟೋಬರ್ನಲ್ಲಿ ಮತ್ತೊಬ್ಬ ಯುವತಿಯ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ. ವಿಷಯ ತಿಳಿದ ಮೊದಲ ಪತ್ನಿ ನೇರವಾಗಿ ಎಂಗೇಜ್ಮೆಂಟ್ ಮನೆಗೆ ನುಗ್ಗಿ ಸತ್ಯ ಬಿಚ್ಚಿಟ್ಟಿದ್ದರು. ಅಂದು ಯುವತಿಯ ಮನೆಯವರಿಂದ ರವಿಗೆ 'ಧರ್ಮದೇಟಿನ' ಮಳೆ ಸುರಿದಿತ್ತು. ರಕ್ತ ಬರುವಂತೆ ಏಟು ತಿಂದರೂ ಈತನ ಕಾಮದ ಹಸಿವು ಮಾತ್ರ ಕಡಿಮೆಯಾಗಿರಲಿಲ್ಲ!
ಡೆಲಿವರಿಗೆ ಹೋದ ಪತ್ನಿ; ಮದುವೆ ಮಂಟಪಕ್ಕೇರಿದ ಪತಿ!
ಮೊದಲ ಪತ್ನಿ ಮಗುವಿಗೆ ಜನ್ಮ ನೀಡಲು ಆಸ್ಪತ್ರೆ ಸೇರಿದರೆ, ಇಲ್ಲಿ ಪತಿರಾಯ ಮದುವೆ ಮಂಟಪ ರೆಡಿ ಮಾಡಿಕೊಂಡಿದ್ದ. 2025ರ ಡಿಸೆಂಬರ್ನಲ್ಲಿ ತನಗೆ ಮದುವೆಯೇ ಆಗಿಲ್ಲ ಎಂದು ನಂಬಿಸಿ ಇನ್ನೊಬ್ಬ ಅಬಲೆಗೆ ತಾಳಿ ಕಟ್ಟಿದ್ದ. ಈ ಎರಡನೇ ಮದುವೆಯ ಸುಳಿವು ಸಿಗುತ್ತಿದ್ದಂತೆ ಮೊದಲ ಪತ್ನಿಯ ಕಡೆಯವರು ರವಿಯ ಮನೆಗೆ ನುಗ್ಗಿ ಸಾರ್ವಜನಿಕವಾಗಿ ಆತನಿಗೆ ಚಳಿ ಬಿಡಿಸಿದ್ದಾರೆ.
"ಒಬ್ಬಳಿಗೆ ದ್ರೋಹ ಮಾಡಿದೆ, ಮತ್ತೊಬ್ಬಳಿಗೆ ವಂಚಿಸಿದೆ, ಈಗ ಮೂರನೇ ಬಲಿಗಾಗಿ ಹೊಂಚು ಹಾಕುತ್ತಿದ್ದೆಯಾ?" ಎಂದು ಜನ ಆತನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಸದ್ಯದ ಸ್ಥಿತಿ: ಪೊಲೀಸರಿಂದ 'ಮಹೂರ್ತ' ಫಿಕ್ಸ್!
ಸಾರ್ವಜನಿಕವಾಗಿ ಏಟು ತಿಂದ ಬೆನ್ನಲ್ಲೇ ಈ 'ಮದುವೆ ವಂಚಕ' ಈಗ ತಲೆಮರೆಸಿಕೊಂಡಿದ್ದಾನೆ. ಜಿಗಣಿ ಪೊಲೀಸರು ವಂಚನೆ ಹಾಗೂ ಬಹುಪತ್ನಿತ್ವದ ಅಡಿಯಲ್ಲಿ ಕೇಸ್ ದಾಖಲಿಸಿದ್ದು, ಈತನ ಸರಣಿ ವಂಚನೆಗೆ ಸಾಥ್ ನೀಡಿದ ಕುಟುಂಬಸ್ಥರಿಗೂ ಬಿಸಿ ಮುಟ್ಟಿಸಲು ಸಿದ್ಧರಾಗಿದ್ದಾರೆ. ಹಸೆಮಣೆ ಏರಿ ಮೆರೆದ ಇಂಜಿನಿಯರ್ ಈಗ ಕಂಬಿ ಎಣಿಸುವ ಕಾಲ ಹತ್ತಿರ ಬಂದಿದೆ









Comments
Leave a Comment