ಹಳೇ ವೈಷಮ್ಯದ ಕಿಚ್ಚಿಗೆ ವ್ಯಕ್ತಿ ಬಲಿ; ಹಗಲು ಹೊತ್ತಿನಲ್ಲೇ ಗುಂಡಿನ ಸುರಿಮಳೆಗೈದು ಪೊಲೀಸರಿಗೇ ಚಾಲೆಂಜ್ ಹಾಕಿದ ಕಿರಾತಕರು!
ಕಲಬುರಗಿ:
ಶಾಂತವಾಗಿದ್ದ ಸಿಮೆಂಟ್ ನಗರಿ ವಾಡಿಯಲ್ಲಿ ಇಂದು ರಕ್ತದ ಓಕುಳಿ ಹರಿದಿದೆ. ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದ ಹೃದಯಭಾಗದಲ್ಲೇ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಟ್ರಾನ್ಸ್ಪೋರ್ಟ್ ಉದ್ಯಮಿ ಹಾಗೂ ಸ್ಥಳೀಯ ‘ಭಾಯ್ ಭಾಯ್’ ಗ್ರೂಪ್ನ ಮುಖಂಡ ಇರ್ಫಾನ್ (42) ಎಂಬುವವರನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಸಿನಿಮೀಯ ಮಾದರಿಯಲ್ಲಿ ನಡೆದ ಈ ಕೊಲೆ ಕೃತ್ಯದಿಂದ ಇಡೀ ಜಿಲ್ಲೆ ಬೆಚ್ಚಿಬಿದ್ದಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.
ಸ್ಕೂಟರ್ ಅಡ್ಡಗಟ್ಟಿ ಗುಂಡಿನ ದಾಳಿ:
ಇರ್ಫಾನ್ ಅವರು ಎಂದಿನಂತೆ ತಮ್ಮ ಸ್ಕೂಟರ್ ಮೇಲೆ ವಾಡಿಯ ಬಲರಾಮ್ ಚೌಕ್ ರಸ್ತೆಯಲ್ಲಿ ಸಾಗುತ್ತಿದ್ದಾಗ, ಹೊಂಚು ಹಾಕಿ ಕುಳಿತಿದ್ದ ಹಂತಕರು ಕಾರಿನಲ್ಲಿ ಬಂದು ಏಕಾಏಕಿ ಅಡ್ಡಗಟ್ಟಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸುವ ಮೊದಲೇ ದುಷ್ಕರ್ಮಿಗಳು ಪಿಸ್ತೂಲಿನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡೇಟು ತಗುಲಿ ಇರ್ಫಾನ್ ಕೆಳಗೆ ಬೀಳುತ್ತಿದ್ದಂತೆ, ಕಾರಿನಿಂದ ಇಳಿದು ಬಂದ ಹಂತಕರ ತಂಡ ಮಚ್ಚು ಮತ್ತು ಲಾಂಗ್ಗಳಂತಹ ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಕೊಚ್ಚಿ ಹಾಕಿದ್ದಾರೆ.
ರಕ್ತದ ಮಡುವಿನಲ್ಲಿ ಕೊನೆಯುಸಿರು:
ಜನನಿಬಿಡ ಪ್ರದೇಶದಲ್ಲೇ ಈ ಭೀಕರ ಕೃತ್ಯ ನಡೆದಿದ್ದು, ಸ್ಥಳೀಯರು ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಇರ್ಫಾನ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಎರಡು ಸುತ್ತು ಗುಂಡು ಹಾರಿಸಿದ ಸದ್ದು ಕೇಳಿ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಕೃತ್ಯ ಎಸಗಿದ ಹಂತಕರು ಸ್ಥಳದಿಂದ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಇರ್ಫಾನ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಹಳೇ ವೈಷಮ್ಯದ ಶಂಕೆ:
ಕೊಲೆಯಾದ ಇರ್ಫಾನ್ ಲಾರಿ ಮಾಲೀಕರಾಗಿದ್ದು, ದೊಡ್ಡ ಮಟ್ಟದ ಟ್ರಾನ್ಸ್ಪೋರ್ಟ್ ವ್ಯವಹಾರ ನಡೆಸುತ್ತಿದ್ದರು. ಈ ಹಿಂದೆ ಇದ್ದ ಹಳೇ ವೈಷಮ್ಯವೇ ಈ ವ್ಯವಸ್ಥಿತ ಹತ್ಯೆಗೆ ಕಾರಣವಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಗ್ಯಾಂಗ್ವಾರ್ ಮಾದರಿಯಲ್ಲಿ ನಡೆದ ಈ ದಾಳಿಯ ಹಿಂದೆ ದೊಡ್ಡ ತಂಡವೇ ಇರುವ ಸಾಧ್ಯತೆಯಿದೆ.
ಪೊಲೀಸ್ ಸರ್ಪಗಾವಲು:
ಘಟನಾ ಸ್ಥಳಕ್ಕೆ ವಾಡಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಹಂತಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡುತ್ತಿದ್ದಾರೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.









Comments
Leave a Comment