ಪರೀಕ್ಷೆಯಲ್ಲಿ ಗೆದ್ದರೂ ಜೀವನದ ಪರೀಕ್ಷೆಯಲ್ಲಿ ಸೋತ 15ರ ಹರೆಯದ ಕಿರಣ್; ಮುಳಬಾಗಿಲಿನ ಸೊಣ್ಣವಾಡಿ ಗ್ರಾಮದಲ್ಲಿ ಆಕ್ರಂದನ.
ಕೋಲಾರ: ಶ್ರಮಪಟ್ಟು ಓದಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾದ ಖುಷಿಯಲ್ಲಿದ್ದ ಆ ಬಾಲಕನ ಬಾಳಿನಲ್ಲಿ ವಿಧಿ ವಿಚಿತ್ರ ಆಟವಾಡಿದ್ದಾನೆ. ಪರೀಕ್ಷೆಯ ಫಲಿತಾಂಶ ಬಂದ ಸಂಭ್ರಮವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರುಪಾಲಾದ ಹೃದಯವಿದ್ರಾವಕ ಘಟನೆ ಮುಳಬಾಗಿಲು ತಾಲೂಕಿನ ಸೊಣ್ಣವಾಡಿ ಗ್ರಾಮದಲ್ಲಿ ಸಂಭವಿಸಿದೆ.
ಸೊಣ್ಣವಾಡಿ ಗ್ರಾಮದ ನಿವಾಸಿ, 15 ವರ್ಷದ ಕಿರಣ್ ಸಾವನ್ನಪ್ಪಿದ ದುರ್ದೈವಿ. ಮುಳಬಾಗಿಲು ನಗರದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಿರಣ್, ಇಂದು ಪ್ರಕಟವಾದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ 239 ಅಂಕಗಳನ್ನು (ಶೇ. 38.24) ಪಡೆಯುವ ಮೂಲಕ ಪಾಸಾಗಿದ್ದನು. ಮನೆಯಲ್ಲಿ ಮತ್ತು ಗೆಳೆಯರ ಬಳಿ ತಾನು ಉತ್ತೀರ್ಣನಾದ ಸಂಭ್ರಮವನ್ನು ಹಂಚಿಕೊಂಡಿದ್ದ ಕಿರಣ್, ಇದೇ ಖುಷಿಯಲ್ಲಿ ಮೂವರು ಸ್ನೇಹಿತರೊಂದಿಗೆ ಈಜಲೆಂದು ಗ್ರಾಮದ ಬಳಿಯ ಬಾವಿಗೆ ತೆರಳಿದ್ದನು.
ದುರಂತವೆಂದರೆ ಕಿರಣ್ಗೆ ಸರಿಯಾಗಿ ಈಜು ಬರುತ್ತಿರಲಿಲ್ಲ. ಆದರೂ ಸಂಭ್ರಮದ ಭರದಲ್ಲಿ ಬಾವಿಗೆ ದುಮುಕಿದ ಆತ ನೀರಿನ ಆಳ ತಿಳಿಯದೆ ಮುಳುಗಿದ್ದಾನೆ. ಗೆಳೆಯರು ರಕ್ಷಿಸಲು ಪ್ರಯತ್ನಿಸಿದರಾದರೂ ಅಷ್ಟರಲ್ಲೇ ಕಿರಣ್ ನೀರಲ್ಲಿ ನಾಪತ್ತೆಯಾಗಿದ್ದನು. ಪರೀಕ್ಷೆಯಲ್ಲಿ ಗೆದ್ದು ಮುಂದಿನ ಜೀವನದ ಕನಸು ಕಾಣಬೇಕಿದ್ದ ಮಗ, ಫಲಿತಾಂಶ ಬಂದ ಕೆಲವೇ ಗಂಟೆಗಳಲ್ಲಿ ಹೆಣವಾಗಿ ಮನೆಗೆ ಮರಳಿದ್ದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಘಟನಾ ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.









Comments
Leave a Comment